ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ 6 ಟನ್ ಗುಲಾಬಿ ಕಾರ್ಪೆಟ್ ನಿಂದ ಭವ್ಯ ಸ್ವಾಗತ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಮೂರು ದಿನಗಳ 85 ನೇ ಸಂಪುಟ ಸಭೆಯಲ್ಲಿ ಭಾಗವಹಿಸಲು ಶನಿವಾರ ಬೆಳಿಗ್ಗೆ ರಾಯ್ಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ.
ನಗರದ ವಿಮಾನ ನಿಲ್ದಾಣದ ಮುಂಭಾಗದ ರಸ್ತೆಯ ಉದ್ದಕ್ಕೂ ಗುಲಾಬಿ ದಳಗಳ ದಪ್ಪ ಪದರದಿಂದ ಕಾರ್ಪೆಟ್ ಮಾಡಲಾಗಿತ್ತು. ಸುಮಾರು ಎರಡು ಕಿ.ಮೀ.ವರೆಗೆ ರಸ್ತೆಯನ್ನು ಅಲಂಕರಿಸಲು 6,000 ಕೆಜಿಗೂ ಹೆಚ್ಚು ಗುಲಾಬಿಗಳನ್ನು ಬಳಸಲಾಯಿತು. ವರ್ಣರಂಜಿತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ ಜಾನಪದ ಕಲಾವಿದರು ಮಾರ್ಗದ ಉದ್ದಕ್ಕೂ ನಿರ್ಮಿಸಲಾದ ಉದ್ದನೆಯ ವೇದಿಕೆಯಲ್ಲಿ ಪ್ರದರ್ಶನ ನೀಡಿದರು.
ಬೆಳಗ್ಗೆ 8.30ರ ಸುಮಾರಿಗೆ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಮತ್ತು ಪಕ್ಷದ ಇತರ ಮುಖಂಡರು ಬರಮಾಡಿಕೊಂಡರು.
ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅವರಿಗೆ ಭವ್ಯ ಸ್ವಾಗತ ಕೋರಿದ್ದಾರೆ. ಪಕ್ಷ ಬಾವುಟಗಳನ್ನು ಬೀಸಿ ಘೋಷಣೆ ಕೂಗಿದ್ದಾರೆ.
ವಿಮಾನ ನಿಲ್ದಾಣದಿಂದ ಪ್ರಿಯಾಂಕಾ ಗಾಂಧಿ ಕಾರ್ ನಲ್ಲಿ ಪ್ರಯಾಣ ಬೆಳೆಸಿದ್ದು, ವಾಹನದ ರನ್ನಿಂಗ್ ಬೋರ್ಡ್ ಮೇಲೆ ನಿಂತು ಬೆಂಬಲಿಗರತ್ತ ಕೈ ಬೀಸಿದರು. ಸುಮಾರು ಎರಡು ಕಿ.ಮೀ ಉದ್ದದ ರಸ್ತೆಯಲ್ಲಿ ದಟ್ಟವಾದ ಗುಲಾಬಿ ಹೂವುಗಳು ಮತ್ತು ಅದರ ದಳಗಳಿಂದ ಗುಲಾಬಿ ರತ್ನಗಂಬಳಿ ಹಾಸಲಾಗಿದ್ದು, ಬೆಂಬಲಿಗರು ಪ್ರಿಯಾಂಕಾ ಅವರ ಮೇಲೆ ಗುಲಾಬಿ ದಳಗಳನ್ನು ಸುರಿಸಿದ್ದಾರೆ. ಇಷ್ಟೊಂದು ಅದ್ಧೂರಿ ಸ್ವಾಗತ ಸಿಕ್ಕಿರುವುದಕ್ಕೆ ಪುಳಕಿತನಾಗಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
